kn_obs/content/16.md

18 KiB

16. ವಿಮೋಚಕರು

OBS Image

ಯೆಹೋಶುವನು ಸತ್ತ ನಂತರ, ಇಸ್ರಾಯೇಲ್ಯರು ದೇವರಿಗೆ ಅವಿಧೇಯರಾದರು. ಅವರು ದೇವರ ನಿಯಮಗಳಿಗೆ ವಿಧೇಯರಾಗಲಿಲ್ಲ, ಮತ್ತು ಅವರು ವಾಗ್ದತ್ತ ದೇಶದಿಂದ ಉಳಿದ ಕಾನಾನ್ಯರನ್ನು ಹೊರಡಿಸಿಬಿಡಲಿಲ್ಲ. ಇಸ್ರಾಯೇಲ್ಯರು ಸತ್ಯ ದೇವರಾದ ಯೆಹೋವನಿಗೆ ಬದಲಾಗಿ ಕಾನಾನ್ಯರ ದೇವರುಗಳನ್ನು ಆರಾಧಿಸಲು ಪ್ರಾರಂಭಿಸಿದರು. ಇಸ್ರಾಯೇಲರೊಳಗೆ ಅರಸನಿರಲಿಲ್ಲ, ಪ್ರತಿಯೊಬ್ಬನೂ ತನ್ನ ಮನಸ್ಸಿಗೆ ಬಂದಂತೆ ನಡೆಯುತ್ತಿದ್ದನು.

OBS Image

ಇಸ್ರಾಯೇಲ್ಯರು ದೇವರಿಗೆ ಅವಿಧೇಯರಾಗುವುದನ್ನು ರೂಢಿಮಾಡಿಕೊಂಡರು . ಅವರು ನಡೆದುಕೊಳ್ಳುತ್ತಿದ್ದ ರೀತಿ ಹೀಗಿದೆ: ಇಸ್ರಾಯೇಲ್ಯರು ಅನೇಕ ವರ್ಷಗಳ ಕಾಲ ದೇವರಿಗೆ ಅವಿಧೇಯರಾಗಿರುವರು, ಅನಂತರ ಅವರ ವೈರಿಗಳು ಅವರನ್ನು ಸೋಲಿಸುವಂತೆ ಮಾಡುವ ಮೂಲಕ ಅವರನ್ನು ಶಿಕ್ಷಿಸುವನು. ಈ ಶತ್ರುಗಳು ಇಸ್ರಾಯೇಲ್ಯರ ವಸ್ತುಗಳನ್ನು ಕೊಳ್ಳೆಹೊಡೆಯವರು, ಅವರ ಆಸ್ತಿಯನ್ನು ನಾಶಮಾಡುವರು, ಮತ್ತು ಅವರಲ್ಲಿ ಅನೇಕರನ್ನು ಕೊಲ್ಲುವರು. ಅನಂತರ ಇಸ್ರಾಯೇಲ್ಯರ ಶತ್ರುಗಳು ಅವರನ್ನು ಅನೇಕ ವರ್ಷಗಳವರೆಗೂ ಬಾಧಿಸುವರು, ಇಸ್ರಾಯೇಲ್ಯರು ತಮ್ಮ ಪಾಪಕ್ಕಾಗಿ ಪಶ್ಚಾತ್ತಾಪ ಪಡುತ್ತಾರೆ ಮತ್ತು ತಮ್ಮನ್ನು ಬಿಡಿಸಬೇಕೆಂದು ದೇವರನ್ನು ಬೇಡಿಕೊಳ್ಳುತ್ತಾರೆ. ಇದು ಇಸ್ರಾಯೇಲ್ಯರ್ ಜೀವನವಾಗಿತ್ತು.

OBS Image

ಪ್ರತಿ ಬಾರಿಯೂ ಇಸ್ರಾಯೇಲ್ಯರು ಪಶ್ಚಾತ್ತಾಪಪಡುವಾಗ, ದೇವರು ಅವರನ್ನು ಬಿಡಿಸುತ್ತಿದ್ದನು. ಅವರ ಶತ್ರುಗಳ ವಿರುದ್ಧವಾಗಿ ಹೋರಾಡಿ ಅವರನ್ನು ಸೋಲಿಸುವಂಥ ಒಬ್ಬ ವಿಮೋಚಕನನ್ನು ಒದಗಿಸುವ ಮೂಲಕ ಆತನು ಇದನ್ನು ಮಾಡುತ್ತಿದ್ದನು. ನಂತರ ದೇಶದಲ್ಲಿ ಸಮಾಧಾನವಿರುತ್ತಿತ್ತು ಮತ್ತು ವಿಮೋಚಕನು ಅವರನ್ನು ಉತ್ತಮವಾಗಿ ಆಳುತ್ತಿದ್ದನು. ಜನರನ್ನು ಬಿಡಿಸುವುದಕ್ಕಾಗಿ ದೇವರು ಅನೇಕ ವಿಮೋಚಕರನ್ನು ಕಳುಹಿಸಿದನು. ಇಸ್ರಾಯೇಲ್ಯರನ್ನು ಸೋಲಿಸಲು ಸಮೀಪದ ಶತ್ರುಗಳ ಜನಾಂಗವಾದ ಮಿದ್ಯಾನ್ಯರನ್ನು ಅನುಮತಿಸಿದ ಬಳಿಕವು ದೇವರು ಮತ್ತೊಮ್ಮೆ ಇದನ್ನು ಮಾಡಿದನು.

OBS Image

ಮಿದ್ಯಾನ್ಯರು ಇಸ್ರಾಯೇಲ್ಯರ ಎಲ್ಲಾ ಬೆಳೆಗಳನ್ನೂ ಏಳು ವರ್ಷಗಳ ಕಾಲ ತೆಗೆದುಕೊಂಡರು. ಇಸ್ರಾಯೇಲ್ಯರು ಬಹು ಭಯಭೀತರಾಗಿ ಗುಹೆಗಳಲ್ಲಿ ಅಡಗಿಕೊಂಡರು, ಆದ್ದರಿಂದ ಮಿದ್ಯಾನ್ಯರು ಅವರನ್ನು ಹುಡುಕಲಾಗಲಿಲ್ಲ. ಅಂತಿಮವಾಗಿ, ತಮ್ಮನ್ನು ರಕ್ಷಿಸಬೇಕೆಂದು ಅವರು ದೇವರಿಗೆ ಮೊರೆಯಿಟ್ಟರು.

OBS Image

ಗಿದ್ಯೋನ್ ಎಂಬ ಹೆಸರುಳ್ಳ ಒಬ್ಬಇಸ್ರಾಯೇಲ್ಯನಿದ್ದನು. ಒಂದು ದಿನ ಮಿದ್ಯಾನ್ಯರು ಬೆಳೆಯನ್ನು ಕದಿಯಬಾರದೆಂದು ಮರೆಯಾದ ಸ್ಥಳದಲ್ಲಿ ಧಾನ್ಯವನ್ನು ಸಂಗ್ರಹಿಸಿ ಒಕ್ಕುತಿದ್ದನು, ಯೆಹೋವನ ದೂತನು ಗಿದ್ಯೋನನ ಬಳಿಗೆ ಬಂದು, “ಪರಾಕ್ರಮಶಾಲಿಯೇ, ದೇವರು ನಿನ್ನ ಸಂಗಡ ಇದ್ದಾನೆ, ನೀನು ಹೋಗಿ ಇಸ್ರಾಯೇಲ್ಯರನ್ನು ಮಿದ್ಯಾನ್ಯರಿಂದ ಬಿಡಿಸು” ಎಂದು ಹೇಳಿದನು.

OBS Image

ಗಿದ್ಯೋನನ ತಂದೆ ಬಳಿ ವಿಗ್ರಹಕ್ಕೆ ಸಮರ್ಪಿತವಾದ ಯಜ್ಞವೇದಿಯಿತ್ತು. ಆ ಯಜ್ಞವೇದಿಯನ್ನು ಕೆಡವಿಹಾಕಬೇಕೆಂಬುದೇ ದೇವರು ಗಿದ್ಯೋನನಿಗೆ ಮೊದಲು ಮಾಡಬೇಕೆಂದು ಹೇಳಿದ ಕಾರ್ಯವಾಗಿತ್ತು. ಆದರೆ ಗಿದ್ಯೋನನು ಜನರಿಗೆ ಭಯಪಟ್ಟನು, ಆದ್ದರಿಂದ ಅವನು ರಾತ್ರಿಯಾಗುವವರೆಗೂ ಕಾಯುತ್ತಿದ್ದನು. ನಂತರ ಅವನು ಯಜ್ಞವೇದಿಯನ್ನು ಕೆಡವಿಹಾಕಿ ಅದನ್ನು ತುಂಡುತುಂಡುಗಳಾಗಿ ಒಡೆದುಹಾಕಿದನು. ಅವನು ಅದರ ಸಮೀಪದಲ್ಲಿಯೇ ದೇವರಿಗೆ ಹೊಸ ಯಜ್ಞವೇದಿಯನ್ನು ಕಟ್ಟಿ, ಅದರ ಮೇಲೆ ದೇವರಿಗೆ ಯಜ್ಞಮಾಡಿದನು.

OBS Image

ಮರುದಿನ ಬೆಳಿಗ್ಗೆ ಜನರು ಯಾರೋ ಯಜ್ಞವೇದಿಯನ್ನು ಕೆಡವಿಬಿಟ್ಟು ನಾಶಮಾಡಿರುವುದನ್ನು ನೋಡಿದರು ಮತ್ತು ಅವರು ಬಹಳಷ್ಟು ಕೋಪಗೊಂಡರು. ಅವರು ಗಿದ್ಯೋನನ್ನು ಕೊಲ್ಲಲು ಅವನ ಮನೆಗೆ ಹೋದರು, ಆದರೆ ಗಿದ್ಯೋನನ ತಂದೆಯ, "ನೀವು ನಿಮ್ಮ ದೇವರಿಗೆ ಸಹಾಯ ಮಾಡಲು ಯಾಕೆ ಪ್ರಯತ್ನಿಸುತ್ತಿದ್ದೀರಿ? ಅವನು ದೇವರಾಗಿದ್ದರೆ, ಅವನು ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ!" ಎಂದು ಹೇಳಿದನು. ಅವನು ಹೀಗೆ ಹೇಳಿದ್ದರಿಂದ ಜನರು ಗಿದ್ಯೋನನ್ನು ಕೊಲ್ಲಲಿಲ್ಲ.

OBS Image

ಆಗ ಮಿದ್ಯಾನ್ಯರು ಇಸ್ರಾಯೇಲ್ಯರಿಂದ ಕದ್ದುಕೊಳ್ಳಲು ಮತ್ತೆ ಬಂದರು. ಅವರನ್ನು ಎಣಿಸಲಾಗದಷ್ಟು ಬಹಳ ಮಂದಿಯಿದ್ದರು. ಅವರೊಂದಿಗೆ ಯುದ್ಧಮಾಡಲು ಗಿದ್ಯೋನನು ಇಸ್ರಾಯೇಲ್ಯರನ್ನು ಒಟ್ಟಾಗಿ ಕರೆಯಿಸಿದನು. ದೇವರು ಇಸ್ರಾಯೇಲ್ಯರನ್ನು ರಕ್ಷಿಸಲು ತನಗೆ ನಿಜವಾಗಿ ಹೇಳುತ್ತಿದ್ದಾನೆ ಎಂದು ದೃಢಪಡಿಸಿಕೊಳ್ಳಲು ಗಿದ್ಯೋನನು ದೇವರ ಬಳಿ ಎರಡು ಗುರುತಗಳನ್ನು ಬೇಡಿಕೊಂಡನು.

OBS Image

ಮೊದಲನೆಯ ಗುರುತಿಗಾಗಿ, ಗಿದ್ಯೋನನು ನೆಲದ ಮೇಲೆ ಕುರಿಯ ತುಪ್ಪಟವನ್ನು ಇಟ್ಟು, ಮುಂಜಾನೆಯ ಮಂಜು ಅದರಲ್ಲಿ ಮಾತ್ರ ಬಿದ್ದಿರಬೇಕು ನೆಲದಲ್ಲಿ ಬೀಳಬಾರದು ಎಂದು ದೇವರನ್ನು ಬೇಡಿಕೊಂಡನು. ದೇವರು ಅದನ್ನು ಮಾಡಿದನು. ಮರುದಿನದ ರಾತ್ರಿ, ಅವನು ನೆಲವು ಮಾತ್ರ ತೇವವಾಗಿರಬೇಕು ಆದರೆ ಕುರಿಯ ತುಪ್ಪಟ ಒಣಗಿರಬೇಕು ಎಂದು ಬೇಡಿಕೊಂಡನು. ದೇವರು ಅದನ್ನು ಕೂಡಾ ಮಾಡಿದನು. ಈ ಎರಡು ಗುರುತಗಳ ನಿಮಿತ್ತವಾಗಿ, ಇಸ್ರಾಯೇಲ್ಯರನ್ನು ಮಿದ್ಯಾನ್ಯರಿಂದ ತಾನು ನಿಜವಾಗಿಯೂ ರಕ್ಷಿಸಬೇಕೆಂದು ದೇವರು ಬಯಸಿದನೆಂದು ಗಿದ್ಯೋನನು ನಂಬಿದ್ದನು.

OBS Image

ಆಗ ಗಿದ್ಯೋನನು ಸೈನಿಕರನ್ನು ತನ್ನ ಬಳಿಗೆ ಕರೆಯಿಸಿದನು, 32,000 ಮಂದಿ ಅವನ ಬಳಿಗೆ ಬಂದರು. ಆದರೆ ದೇವರು ಅವನಿಗೆ ಇವರು ತುಂಬಾ ಅಧಿಕವಾಗಿದ್ದಾರೆ ಎಂದು ಹೇಳಿದನು. ಆದ್ದರಿಂದ ಗಿದ್ಯೋನನು ಯುದ್ಧಮಾಡಲ ದೈರ್ಯವಿಲ್ಲದ 22,000 ಮಂದಿಯನ್ನು ಮನೆಗೆ ಕಳುಹಿಸಿದನು. ಅವನ ಬಳಿ ಇನ್ನೂ ತುಂಬಾ ಜನರಿದ್ದಾರೆಂದು ದೇವರು ಗಿದ್ಯೋನನಿಗೆ ಹೇಳಿದನು. ಆದ್ದರಿಂದ ಗಿದ್ಯೋನನು 300 ಸೈನಿಕರು ಹೊರತುಪಡಿಸಿ ಬೇರೆ ಎಲ್ಲರನ್ನೂ ಮನೆಗೆ ಕಳುಹಿಸಿದನು.

OBS Image

ಆ ರಾತ್ರಿಯಲ್ಲಿ ದೇವರು ಗಿದ್ಯೋನನಿಗೆ, "ಮಿದ್ಯಾನ್ಯರ ಪಾಳೆಯಕ್ಕೆ ಹೋಗಿ ಅವರ ಮಾತನ್ನು ಲಾಲಿಸು, ಅವರು ಏನು ಹೇಳುತ್ತಿದ್ದಾರೆಂಬುದನ್ನು ನೀವು ಲಾಲಿಸವಾಗ ನೀವು ಅವರ ಮೇಲೆ ಆಕ್ರಮಣ ಮಾಡಲು ಹೆದರುವುದಿಲ್ಲ" ಎಂದು ಹೇಳಿದನು. ಆ ರಾತ್ರಿಯಲ್ಲಿ, ಗಿದ್ಯೋನನು ಪಾಳೆಯಕ್ಕೆ ಹೋದನು ಮತ್ತು ಮಿದ್ಯಾನ್ಯರ ಸೈನಿಕನು ತನ್ನ ಸ್ನೇಹಿತನಿಗೆ ತಾನು ಕಂಡ ಕನಸಿನ ಬಗ್ಗೆ ಹೇಳುತ್ತಿರುವುದನ್ನು ಕೇಳಿಸಿಕೊಂಡನು. ಆ ಮನುಷ್ಯನ ಸ್ನೇಹಿತನು, "ಗಿದ್ಯೋನನ ಸೈನ್ಯವು ನಮ್ಮನ್ನು ಅಂದರೆ ಮಿದ್ಯಾನ್ಯರ ಸೈನ್ಯವನ್ನು ಸೋಲಿಸುತ್ತದೆ ಎಂಬುದೇ ಆ ಕನಸಿನ ಅರ್ಥವಾಗಿದೆ" ಎಂದು ಹೇಳಿದನು. ಗಿದ್ಯೋನನು ಇದನ್ನು ಕೇಳಿಸಿಕೊಂಡಾಗ ದೇವರನ್ನು ಆರಾಧಿಸಿದನು.

OBS Image

ಆಗ ಗಿದ್ಯೋನನು ತನ್ನ ಸೈನ್ಯದ ಬಳಿಗೆ ಹಿಂದಿರುಗಿ ಬಂದನು ಮತ್ತು ಅವರಲ್ಲಿ ಪ್ರತಿಯೊಬ್ಬನಿಗೂ ಕೊಂಬನ್ನು, ಮಣ್ಣಿನ ಮಡಕೆಯನ್ನು ಮತ್ತು ಉರಿಯುವ ಪಂಜನ್ನು ಕೊಟ್ಟನು. ಅವರು ಮಿದ್ಯಾನ್ಯರ ಸೈನಿಕರು ಮಲಗಿದ್ದ ಪಾಳೆಯವನ್ನು ಸುತ್ತುವವರಿದ್ದರು. ಗಿದ್ಯೋನನ 300 ಸೈನಿಕರು ಮಡಿಕೆಗಳಲ್ಲಿ ಉರಿಯುವ ಪಂಜನ್ನು ಇಟ್ಟುಕೊಂಡಿದ್ದರು, ಆದ್ದರಿಂದ ಮಿದ್ಯಾನ್ಯರು ಪಂಜುಗಳ ಬೆಳಕನ್ನು ನೋಡಲಾಗಲಿಲ್ಲ.

OBS Image

ಅನಂತರ, ಗಿದ್ಯೋನನ ಸೈನಿಕರೆಲ್ಲರು ಒಂದೇ ಸಮಯದಲ್ಲಿ ತಮ್ಮಲ್ಲಿದ್ದ ಮಡಿಕೆಗಳನ್ನು ಒಡೆದುಬಿಟ್ಟು, ಹಠತ್ತಾಗಿ ಉರಿಯುವ ಪಂಜಗಳನ್ನು ಬಹಿರಂಗಪಡಿಸಿದರು. ಅವರು ತಮ್ಮ ಕೊಂಬುಗಳನ್ನು ಊದಿ, "ಯೆಹೋವನ ಮತ್ತು ಗಿದ್ಯೋನನ ಖಡ್ಗ!" ಎಂದು ಕೂಗಿದರು.

OBS Image

ದೇವರು ಮಿದ್ಯಾನ್ಯರನ್ನು ಗಲಿಬಿಲಿಗೊಳಿಸಿದನು, ಅವರು ಪರಸ್ಪರ ಒಬ್ಬರ ಮೇಲೊಬ್ಬರು ಆಕ್ರಮಣ ಮಾಡಿ ಕೊಂದಹಾಕಲು ಪ್ರಾರಂಭಿಸಿದರು. ತಕ್ಷಣವೇ, ಗಿದ್ಯೋನನು ಇತರ ಇಸ್ರಾಯೇಲ್ಯರು ತಮ್ಮ ಮನೆಗಳಿಂದ ಬಂದು ಮಿದ್ಯಾನ್ಯರನ್ನು ಬೆನ್ನಟ್ಟುವುದಕ್ಕೆ ಸಹಾಯ ಮಾಡಬೇಕೆಂದು ಕರೆಯಿಸುವುದಕ್ಕಾಗಿ ದೂತರನ್ನು ಕಳುಹಿಸಿದನು. ಅವರು ಅನೇಕರನ್ನು ಕೊಂದಹಾಕಿದರು ಮತ್ತು ಉಳಿದವರನ್ನು ಇಸ್ರಾಯೇಲ್ಯರ ದೇಶದಿಂದ ಓಡಿಸಿಬಿಟ್ಟರು. ಆ ದಿನದಲ್ಲಿ 120,000 ಮಿದ್ಯಾನ್ಯರು ಸತ್ತುಹೋದರು. ಹೀಗೆ ದೇವರು ಇಸ್ರಾಯೇಲನ್ನು ರಕ್ಷಿಸಿದನು.

OBS Image

ಜನರು ಗಿದ್ಯೋನನು ತಮ್ಮ ರಾಜನನ್ನಾಗಿ ಮಾಡಿಕೊಳ್ಳಬೇಕೆಂದು ಬಯಸಿದರು. ಹಾಗೆ ಮಾಡಲು ಗಿದ್ಯೋನನು ಅವರಿಗೆ ಅನುಮತಿ ಕೊಡಲಿಲ್ಲ, ಆದರೆ ಅವನು ಅವರಲ್ಲಿ ಪ್ರತಿಯೊಬ್ಬರೂ ಮಿದ್ಯಾನ್ಯರಿಂದ ತೆಗೆದುಕೊಂಡಿದ್ದಂಥ ಕೆಲವು ಬಂಗಾರದ ಉಂಗುರಗಳನ್ನು ಅಥವಾ ಓಲೆಗಳನ್ನು ಕೊಡಬೇಕೆಂದು ಅವರನ್ನು ಕೇಳಿಕೊಂಡನು. ಜನರು ಗಿದ್ಯೋನನಿಗೆ ದೊಡ್ಡ ಪ್ರಮಾಣದ ಬಂಗಾರವನ್ನು ಕೊಟ್ಟರು.

OBS Image

ಅನಂತರ ಗಿದ್ಯೋನನು ಮಹಾಯಾಜಕನು ಧರಿಸುತ್ತಿದ್ದಂಥ ವಿಶೇಷವಾದ ವಸ್ತ್ರವನ್ನು ಮಾಡಲು ಆ ಬಂಗಾರವನ್ನು ಬಳಸಿದನು. ಆದರೆ ಜನರು ಅದನ್ನು ವಿಗ್ರಹದಂತೆ ಪೂಜಿಸಲು ಪ್ರಾರಂಭಿಸಿದರು.ಅವರು ಹಾಗೆ ಮಾಡಿದ್ದರಿಂದ ದೇವರು ಇಸ್ರಾಯೇಲನ್ನು ಮತ್ತೊಮ್ಮೆ ಶಿಕ್ಷಿಸಿದನು . ದೇವರು ಅವರ ಶತ್ರುಗಳ ನಿಮಿತ್ತ ಅವರು ಸೋತುಹೋಗುವಂತೆ ಮಾಡಿದನು. ಅವರು ಅಂತಿಮವಾಗಿ ಸಹಾಯಕ್ಕಾಗಿ ದೇವರಿಗೆ ಮೊರೆಯಿಟ್ಟರು ಮತ್ತು ದೇವರು ಅವರನ್ನು ರಕ್ಷಿಸಲು ಮತ್ತೊಬ್ಬ ವಿಮೋಚಕನನ್ನು ಕಳುಹಿಸಿದನು.

OBS Image

ಇದೇ ಸಂಗತಿ ಅನೇಕ ಬಾರಿ ನಡೆಯಿತು: ಇಸ್ರಾಯೇಲ್ಯರು ಪಾಪ ಮಾಡುತ್ತಿದ್ದರು, ದೇವರು ಅವರನ್ನು ಶಿಕ್ಷಿಸುತ್ತಿದ್ದನು, ಅವರು ಪಶ್ಚಾತ್ತಾಪ ಪಡುತ್ತಿದ್ದರು ಮತ್ತು ದೇವರು ಅವರನ್ನು ಬಿಡಿಸಲು ಯಾರನ್ನಾದರೂ ಕಳುಹಿಸುತ್ತಿದ್ದನು. ಅನೇಕ ವರ್ಷಗಳಲ್ಲಿ, ಇಸ್ರಾಯೇಲ್ಯರನ್ನು ಅವರ ಶತ್ರುಗಳಿಂದ ರಕ್ಷಿಸಿದಂಥ ಅನೇಕ ವಿಮೋಚಕರನ್ನು ದೇವರು ಕಳುಹಿಸಿದನು.

OBS Image

ಅಂತಿಮವಾಗಿ ಜನರು ಇತರ ಎಲ್ಲಾ ಜನಾಂಗಗಳಿಗಿರುವಂತೆ ತಮ್ಮಗೊಬ್ಬ ಅರಸನು ಬೇಕೆಂದು ದೇವರನ್ನು ಬೇಡಿಕೊಂಡರು. ಉನ್ನತನೂ ಬಲಿಷ್ಠನೂ ಆದಂಥ ಮತ್ತು ಅವರನ್ನು ಯುದ್ಧದಲ್ಲಿ ನಡೆಸುವಂಥ ಅರಸನು ಬೇಕೆಂದು ಅವರು ಬಯಸಿದರು. ದೇವರು ಈ ಬಿನ್ನಹವನ್ನು ಇಷ್ಟಪಡಲಿಲ್ಲ, ಆದರೆ ಅವರು ಬೇಡಿಕೊಂಡಂತೆಯೇ ಅವರಿಗೆ ಅರಸನನ್ನು ಕೊಟ್ಟನು.

ಸತ್ಯವೇದದ ಕಥೆ: ನ್ಯಾಯಸ್ಥಾಪಕರು 1-3; 6-8; 1 ಸಮುವೇಲ 1-10